ಕೊಳ್ಳೇಗಾಲ :ಮನುಷ್ಯನ ಮನಸ್ಸು ಮತ್ತು ರಕ್ತ ಶುದ್ಧವಾಗಿದ್ದರೆ, ದೇಹದ ಆರೋಗ್ಯ ಸದಾ ಚೆನ್ನಾಗಿರುತ್ತದೆ. ರಕ್ತದಾನ ಮಾಡುವುದರಿಂದ ರಕ್ತ ಶುದ್ಧಗೊಳ್ಳುವುದಲ್ಲದೆ ರಕ್ತದ ಮರುಉತ್ಪತ್ತಿ ಸಾಮರ್ಥ್ಯ ವೃದ್ಧಿಸುತ್ತದೆ ಎಂದು ಚಾವೈವಿಸಂ ಯ ರಕ್ತನಿಧಿ ಕೇಂದ್ರದ ಹಿರಿಯ ತಂತ್ರಜ್ಞರಾದ ಸತ್ಯಣ್ಣ ಹೇಳಿದರು.ಅವರು ಏ.೧ ರಂದು ಜೆಎಸ್’ಬಿ ಪ್ರತಿಷ್ಠಾನ ಇವರ ವತಿಯಿಂದ ಕೊಳ್ಳೇಗಾಲ ಪಟ್ಟಣದ ಪತಂಜಲಿ ಯೋಗಮಂದಿರದಲ್ಲಿ, ಸಿದ್ದಗಂಗಾ ಮಠದ ಶ್ರೀ ಶಿವಕುಮಾರ ಸ್ವಾಮಿಗಳ ೧೧೯ ನೇ ಜನ್ಮದಿನದ ಅಂಗವಾಗಿ ನಡೆದ ಸ್ವಯಂಪ್ರೇರಿತ ರಕ್ತದಾನ ಶಿಬಿರ ಉದ್ಘಾಟಿಸಿ ಮಾತನಾಡುತ್ತಾ, ರಕ್ತದಾನದ ಮಹತ್ವ ವಿವರಿಸಿದರು.ಪ್ರತಿವರ್ಷ ಲಕ್ಷಾಂತರ ಯುನಿಟ್ ರಕ್ತದ ಕೊರತೆ ಇರುವುದರಿಂದ, ಇಂತಹ ಶಿಬಿರಗಳು ಜೀವ ಉಳಿಸಲು ನೆರವಾಗುತ್ತವೆ. ಆರೋಗ್ಯವಂತ ವ್ಯಕ್ತಿಗಳು, ವಿಶೇಷವಾಗಿ ಯುವಜನತೆ, ರಕ್ತದಾನ ಮಾಡಬೇಕು. ಇದು ದಾನಿಗಳ ಆರೋಗ್ಯದ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆ ಮತ್ತು ಅವರ ಸಾಮಾಜಿಕ ಜವಾಬ್ದಾರಿಯನ್ನು ಹೆಚ್ಚಿಸುತ್ತದೆ ಎಂದರು.ಜೆಎಸ್’ಬಿ ಪ್ರತಿಷ್ಠಾನದ ಎಸ್ ಶಶಿಕುಮಾರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ, ರಕ್ತದಾನ ಮನುಷ್ಯನ ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆ. ಒಬ್ಬರ ರಕ್ತದಾನದಿಂದ ಕನಿಷ್ಠ ಮೂವರ ಪ್ರಾಣ ಉಳಿಸಬಹುದು. ಜನಸಾಮಾನ್ಯ ರಲ್ಲಿ ರಕ್ತದಾನದ ಬಗ್ಗೆ ತಪ್ಪು ಕಲ್ಪನೆಗಳಿದ್ದು, ಅದನ್ನು ಹೋಗಲಾಡಿಸಬೇಕೆಂದರು.ನಮ್ಮ ಪ್ರತಿಷ್ಠಾನದ ವತಿಯಿಂದ ಸಾರ್ವಜನಿಕರ ಅನುಕೂಲಕ್ಕಾಗಿ ಕಳೆದ ಹತ್ತು ವರ್ಷಗಳಿಂದ ಸತತವಾಗಿ ಜಿಲ್ಲೆಯ ವಿವಿಧೆಡೆ ರಕ್ತದಾನ ಮತ್ತು ಆರೋಗ್ಯ ಶಿಬಿರಗಳನ್ನು ಏರ್ಪಡಿಸಲಾಗುತ್ತಿದ್ದು, ಸಾರ್ವಜನಿಕರು ಅವುಗಳಿಂದ ಸಿಗುವ ಸೌಲಭ್ಯಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.ಚಾಮರಾಜನಗರ ವೈದ್ಯಕೀಯ ಸಂಸ್ಥೆಗಳ ರಕ್ತನಿಧಿ ಘಟಕದ ವೈದ್ಯಕೀಯ ತಂಡದವರಾದಡಾ| ಪ್ರಿಯದರ್ಶಿನಿ, ಡಾ| ತೀರ್ಥ, ಹಿರಿಯ ಶುಶ್ರೂಷಕಿಯರಾದ ಸೌಮ್ಯ, ಮಂಗಳಮ್ಮ, ರಕ್ತನಿಧಿ ಕೇಂದ್ರದ ಆಪ್ತಸಮಾಲೋಚಕರಾದ ಅಜ಼್ಗರ್ ಅಹ್ಮದ್, ಮಹದೇವಸ್ವಾಮಿ, ತಂತ್ರಜ್ಞರಾದ ಮೌನೀಷ, ಕೃಷ್ಣಮೂರ್ತಿ, ವಿದ್ಯಾರ್ಥಿಗಳು ಮತ್ತಿತರರು ಉಪಸ್ಥಿತರಿದ್ದರು. ಇಂದಿನ ಶಿಬಿರದಲ್ಲಿ 49 ಮಂದಿ ಭಾಗವಹಿಸಿ ರಕ್ತದಾನ ಮಾಡಿದರು.

